Nammuru..... Nammajana

ನಮ್ಮೂರು..... ನಮ್ಮ ಜನ....

Friday, October 1, 2010

ನೆನೆ ನೆನೆ ಗಾಂಧಿಯನು














ಖಾಲೀ ಗದ್ದಲದ ಈ ನಾಡಿನ ಉದ್ದಗಲಕ್ಕೂ
ಈಗ ಶಾಂತಿ ನೆಲೆಸಿದೆ.
ನರನಾಡಿಯೆಲ್ಲ ನಿಂತೇ ಹೋದಂತಾಗಿ
ನಾವೆಲ್ಲ ಯೋಗಿಗಳಾಗಿದ್ದೇವೆ:
ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ
ಕಿವಿ ತುಂಬ ಹುಲುಸಾಗಿ ಕೂದಲು ಬೆಳೆಯುತ್ತಿದೆ.
-
ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು
ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ.
ಎಲ್ಲಾ ಸಾಮಾನುಗಳ ಬೆಲೆ ಇಳಿದೂ ಇಳಿದೂ
ಈಗ ಕೈಗೆ ಸಿಗದಂತಾಗಿವೆ.
ಬಿಡಾಡಿ ನಾಯಿಗಳ ನಿರ್ಬೀಜೀಕರಣವಾಗಿದೆ.
ಭಾರತದ ಜನಸಂಖ್ಯೆ ಇಳಿಯುತ್ತಿದೆ.
-
ನಾಳಿನ ನಾಗರಿಕರಾದ ಇಂದಿನ ಮಕ್ಕಳೆಲ್ಲ
ಸರಿಯಾಗಿ ಸಾಲೆಗೆ ಹೋಗಿ
ಒಂದು ಎರಡು ಬಾಳೆಲೆ ಹರಡು
ಕಲಿಯುತ್ತಿದ್ದಾರೆ.
ಹಸಗಂಡು ಮನೆಗೆ ಬಂದು
ಮಣ್ಣಿನ ವಾಸನೆಯ ತಾಜಾ ಊಟ ಮಾಡುತ್ತಾರೆ.
-
ಜಾಣ ಬಾಬಾಗಳಿಗೆ ಹುಚ್ಚಗೌಡರ ಬೆನ್ನುಸಿಕ್ಕು
ಧೂರ್ಮೋದ್ಧಾರದ ಸವಾರಿ ಮುನ್ನಡೆದಿದೆ.
ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನವಾಗಿ
ಅವರ ಉದ್ಧಾರವೂ ಆಗುತ್ತಿದೆ.
-
ಸರಕಾರದ ಕೆಲಸ ದೇವರ ಕೆಲಸವಾಗಿ
ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ.
ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ
ಜಿಟಿ ಜಿಟಿ ಮಳೆ ಹಿಡಿದಿದೆ.
ನಮ್ಮ ತ್ರಿವರ್ಣ ಧ್ವಜ ತೊಯ್ದು ತುಪ್ಪಡಿಯಾಗಿ
ಅಶೋಕ ಚಕ್ರ ಸ್ಥಿರವಾಗಿದೆ.
-
ಹೆದ್ದಾರಿಯ ಮೇಲೆ ಕೆಟ್ಟುನಿಂತ ಟ್ರಕ್ಕು ಕೂಡ
ನಾಡ ಮುನ್ನಡೆದಿದೆ- ಎಂಬ ಸಂದೇಶ ಹೊತ್ತಿದೆ.
ರೇಡಿಯೋದ ಗಿಳಿವಿಂಡು, ಅದೋ,
ಒಕ್ಕೊರಲಿಂದ ಅದೇ ಹಾಡು ಹಾಡುತ್ತಿದೆ.
ಧನ್ಯತೆಯ ಈ ಕ್ಷಣದಿ, ಓ ಮುದ್ದುರಂಗ,
ಕಿವಿ ಮುಚ್ಚಿ, ಕಣ್ಣು ಮುಚ್ಚಿ,
ನೆನೆ ನೆನೆ ಗಾಂಧಿಯನು.
(ಯಾವ ಗಾಂಧಿ? ಅಂತ ತಿಳಿಯದೇ ಪೆದ್ದಲಿಂಗ?)
ಬಾಯಿ ಮುಚ್ಚಿ,
ನೆನೆ ನೆನೆ ಗಾಂಧಿಯನು.
- ಚಂದ್ರಶೇಖರ ಪಾಟೀಲ

No comments:

Post a Comment

Blog Archive